
ಇಂಡಿ :ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಜಾರಿಯಲ್ಲಿದ್ದು,ಅರ್ಹರು ಅಗತ್ಯ ದಾಖಲೆ ನೀಡಿ, ಸೌಲಭ್ಯ ಪಡೆಯಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಗ್ರಾಪಂ ಆವರಣದಲ್ಲಿ ಜರುಗಿದ ಪಿಂಚಣಿ ಅದಾಲತನಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈ ಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಪಿಂಚಣಿ ಅದಾಲತ್ ಕಾರ್ಯಕ್ರಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಮೂಲಕ ಜನಸ್ನೇಹಿಯಾಗಿಸಬೇಕಾದ ಹೊಣೆ ಎಲ್ಲ ಹಂತದ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಗ್ರೇಡ್-೨ ತಹಶೀಲ್ದಾರ್ ಧನಪಾಲಶೆಟ್ಟಿ ದೇವೂರ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಯಡಿ ಆರ್ಹ ಫಲಾನುಭವಿಗಳು ಸರಕಾರದಿಂದ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಇದರ ಸೌಲಭ್ಯವನ್ನು ಪಡೆಯದ ಆರ್ಹ ಫಲಾನುಭವಿಗಳು ಕೂಡಲೇ ಅರ್ಜಿ ಸಲ್ಲಿಸಿ ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಶಿಕ್ಷಕ ಸಂತೋಷ ಬಂಡೆ , ಶಿಕ್ಷಕ ಡಿ ಎಸ್ ಹಿರೇಕುರುಬರ ಮಾತನಾಡಿದರು.
ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಅದಾಲತ್ ನೇತೃತ್ವ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸೋಮವ್ವ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಅಂಬವ್ವ ಕೋಟಗೊಂಡ,ಹಿರೇರೂಗಿ ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ, ಕಂದಾಯ ನಿರೀಕ್ಷಕ ಎಚ್ ಎಚ್ ಗುನ್ನಾಪುರ, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಹಂಚಿನಾಳ ಮತ್ತಿತರಿದ್ದರು.








